ತುಮಕೂರು : ದಿನಾಂಕ 20.3.2024ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ವಿಶ್ವ ಶ್ರವಣ ದಿನ ಹಾಗೂ ಕಾಯಕಲ್ಪ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ರವರು ಆಸ್ಪತ್ರೆಯಲ್ಲಿ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣವನ್ನು ಉತ್ತೇಜಿಸುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಮನಹರಿಸಬೇಕು ಎಲ್ಲರೂ ಸೇರಿ ಒಂದು ತಂಡದ ರೀತಿಯಲ್ಲಿ ಉತ್ತಮ ಕಾರ್ಯ ನಿರ್ವಹಣೆ ಮಾಡಿ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಮತ್ತು ಸೇವೆಯನ್ನು ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಮತ್ತು ನಿವಾರಣ ಕಾರ್ಯಕ್ರಮದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದರು. 2021 -22 ಮತ್ತು 2022 -23ನೇ ಸಾಲಿನ ಜಿಲ್ಲಾಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ಜಿಲ್ಲಾ ಆಸ್ಪತ್ರೆ, ವಿವಿಧ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಮತ್ತು ಆಯುಷ್ಮಾನ್ ಆರೋಗ್ಯ ಮಂದಿರ ಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಮಂಜುನಾಥ್ ಡಿ. ಎನ್ ರವರು ಮಾತನಾಡಿ ಈ ದಿನ ನಾವು ವಿಶ್ವ ಶ್ರವಣ ದಿನವನ್ನು ಆಚರಿಸುತ್ತಿದ್ದು ಶ್ರವಣ ನ್ಯೂನತೆ ಹಾಗೂ ಶ್ರವಣ ಆರೈಕೆ ಬಗ್ಗೆ ಹೆಚ್ಚು ಗಮನಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಹುಟ್ಟಿದ 24 ಗಂಟೆಗಳ ನಂತರ ಹೆರಿಗೆ ವಾರ್ಡ್ಗಳಲ್ಲಿಯೇ ಶ್ರವಣದೋಷವನ್ನು ಪತ್ತೆಹಚ್ಚಲು ಶ್ರವಣದೋಷದ ಪರೀಕ್ಷೆ ನಮ್ಮಲ್ಲಿ ನಡೆಯುತ್ತಿದ್ದು ನವಜಾತ ಶಿಶುಗಳ ಶ್ರವಣ ತಪಾಸಣೆಯನ್ನು ಅತ್ಯಂತ ಯಶಸ್ವಿಯಾಗಿ ತಾಲೂಕು ಮಟ್ಟದಲ್ಲಿಯೂ ವಾಣಿ ಡೆಫ್ ಚಿಲ್ಡ್ರನ್ ಫೌಂಡೇಶನ್ ರವರ ಸಹಯೋಗದೊಂದಿಗೆ ನಡೆಸುತ್ತಿದ್ದೇವೆ.
ಹುಟ್ಟಿದ ಎಂಟು ತಿಂಗಳಿನಿoದ ಆರು ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳಲ್ಲಿ ಕಾಕ್ಲಿಯರ್ ಇಂಪ್ಲಾoಟ್ ಚಿಕಿತ್ಸೆಯನ್ನು ಈಗಾಗಲೇ 31 ಮಕ್ಕಳಿಗೆ ಮಾಡಿಸಿದ್ದು ತುಮಕೂರು ಜಿಲ್ಲೆ ಕಾಕ್ಲಿಯರ್ ಇಂಪ್ಲಾoಟ್ ಶಸ್ತ್ರಚಿಕಿತ್ಸೆಯಲ್ಲಿ ರಾಜ್ಯದಲ್ಲಿ 2ನೆಯ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ತೊಡಗಿಕೊಂಡಿರುವ ಆಡಿಯಲಾಜಿ ತಂಡಕ್ಕೆ ಅಭಿನಂದಿಸಿ ಕಾಯಕಲ್ಪ ಪ್ರಶಸ್ತಿ ಸ್ವೀಕರಿಸಿದ ಎಲ್ಲರಿಗೂ ಅಭಿನಂದಿಸಿದರು. ಈ ಕಾರ್ಯಕ್ರಮವನ್ನು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ರೇಖಾ ಕೆ.ಬಿ ಅವರು ಆಯೋಜಿಸಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಅಸ್ಗರ್ ಬೇಗ್, ಆರ್.ಸಿ.ಎಚ್.ಒ ಮೋಹನ್, ಜಿಲ್ಲಾ ಕುಷ್ಟರೋಗ ಅಧಿಕಾರಿ ರವೀಂದ್ರ ನಾಯಕ್, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾಕ್ಟರ್ ಚಂದ್ರಶೇಖರ್ ಉಪಸ್ಥಿತರಿದ್ದರು.