ತುಮಕೂರು;ಭೀಮ ಕೋರೆಗಾಂವ್ ಹೋರಾಟ ಒಂದು ಐತಿಹಾಸಿಕ ಘಟನೆ. ಮರಾಠರ ಪೇಶ್ವೆಗಳಿಂದ ನಿರಂತರ ತುಳಿತಕ್ಕೆ ಒಳಗಾದ ಮಹರ್ ಜನಾಂಗದ ಸೈನಿಕರು, ತಮ್ಮ ಜೀವವನ್ನು ಬದಿಗಿಟ್ಟು,ಸ್ವಾಭಿಮಾನಿ ಹೋರಾಟ ನಡೆಸಿದ ಈ ಘಟನೆಯನ್ನು ಭಾರತದ ಯಾವ ಶೋಷಿತವರ್ಗವೂ ಮರೆಯುವಂತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ತಿಳಿಸಿದ್ದಾರೆ.
ನಗರದ ಟಿ.ಎ.ಪಿ.ಸಿ.ಎಂಎಸ್ ಮುಂಭಾಗದ ಅಂಬೇಡ್ಕರ್ ರಸ್ತೆಯಲ್ಲಿ ದಲಿತಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಚಲ, ಬದ್ದತೆ ಮತ್ತು ಹೋರಾಟವನ್ನು ಮೆಟ್ಟಿ ನಿಲ್ಲುವ ಅವರ ಸ್ವಾಭಿಮಾನ ಇಡೀ ವಿಶ್ವಕ್ಕೆ ಮಾದರಿ.ಭೀಮಾನದಿ ದಡದಲ್ಲಿ ನಡೆದ ಈ ಹೋರಾಟವನ್ನು ನಾವ್ಯಾರು ಮರೆಯುವಂತಿಲ್ಲ ಎಂದರು.
ಭೀಮಾ ಕೋರೆಗಾಂವ್ ಹೋರಾಟದಿಂದ ಎಚ್ಚೆತ್ತುಕೊಂಡು ಬ್ರಿಟಿಷರ ಸರಕಾರ ಈ ದೇಶದ ಶೋಷಿತ ಸಮುದಾಯವನ್ನು ಎದುರು ಹಾಕಿಕೊಂಡರೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ಅರಿತು ದಲಿತರಿಗೆ ಶಿಕ್ಷಣದ ಜೊತೆಗೆ ಹಲವಾರು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟರು. ಇದರಿಂದ ದಲಿತರು ಸ್ವಾತಂತ್ರವಾಗಿ ಬದುಕಲಿಕ್ಕೆ ಬೇಕಾದ ಎಲ್ಲಾ ರೀತಿಯ ಅವಕಾಶಗಳು ದೊರೆತವು.ದಲಿತರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನಡೆದ ಮೊದಲ ಹೆಜ್ಜೆ ಎಂಬುದನ್ನು ನಾವ್ಯಾರು ಮರೆಯುವಂತಿಲ್ಲ.ಇದು ಭಾರತದ ಸ್ವಾತಂತ್ರದ ಮೊದಲ ಮೆಟ್ಟಿಲು ಹಾಗೂ ಎಲ್ಲಾ ಹೋರಾಟಗಳಿಗೆ ಮಾದರಿ ಎಂದು ಕೃಷ್ಣಪ್ಪ ತಿಳಿಸಿದರು.
ತುಮಕೂರು ನಗರದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣದ ಕುರಿತು ಹಲವರು ಪ್ರಶ್ನೆ ಎತ್ತಿದ್ದಾರೆ.ಆದರೆ ಜಿಲ್ಲಾಡಳಿತ ಬಾಳನಕಟ್ಟೆಯಲ್ಲಿ ಮಂಜೂರು ಮಾಡಿರುವ ಜಾಗದ ಬಗ್ಗೆ ಸ್ಥಳೀಯರೊಬ್ಬರು ಹೈಕೋರ್ಟಿನಲ್ಲಿ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಶ್ರೀನಿವಾಸ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಸ್ಥಳಕ್ಕೆ ಭೇಟಿ ನೀಡಿ, ಇದಕ್ಕೆ ಸಂಬAಧಿಸಿದ ಕಡತಗಳನ್ನು ಅಭ್ಯಾಸ ಮಾಡಿ, ಹೈಕೋರ್ಟಿನಲ್ಲಿರುವ ತಡೆಯಾಜ್ಞೆ ತೆರವಿಗೆ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರು. ತಡೆಯಾಜ್ಞೆ ತರವಾದ ಕೂಡಲೇ ಕಟ್ಟಡ ಕಾಮಗಾರಿಯನ್ನು ನಡೆಸಲು ಜಿಲ್ಲಾಡಳಿತ ಸಹ ಸಿದ್ದವಿದೆ ಎಂದು ಜೆ.ಡಿ.ಕೃಷ್ಣಪ್ಪ ನುಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ,ಭೀಮ ಕೋರೆಗಾಂವ ವಿಜಯೋತ್ಸವ ದಲಿತರ ಪಾಲಿಗೆ ಶೌರ್ಯದ ದಿನ. ಒಮ್ಮೆ ಬಾಬಾ ಸಾಹೇಬರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಿಕ್ಕ ಮಾಹಿತಿಯನ್ನು ಆಧರಿಸಿ, ಹೆಚ್ಚಿನ ಸಂಶೋಧನೆಗೆ ಇಳಿದಾಗ, ಇತಿಹಾಸದ ಪುಟಗಳಲ್ಲಿ ಹುದುಗಿ ಹೋಗಿದ್ದ ಭೀಮಾ ಕೋರೆಗಾಂವ್ ಸಾಹಸ ಪ್ರಕರಣ ಬೆಳಕಿಗೆ ಬರುತ್ತದೆ. ಮಾರಾಠರ ಭಾಜಿರಾವ್ನ ೨೮ ಸಾವಿರ ಸೈನಿಕರನ್ನು, ಮಹರ್ ಜನಾಂಗದ ಕೇವಲ ೫೦೦ ಜನ ಸೈನಿಕರು ಸದೆ ಬಡಿದು, ರುಂಡವನ್ನು ಚಂಡಾಡಿದ ಶೌರ್ಯದ ದಿನ.ಹಾಗಾಗಿ ಇಂತಹ ಐತಿಹಾಸಿಕ ದಿನವನ್ನು ಇಡೀ ದಲಿತ ಸಮುದಾಯದ ತಮ್ಮ ಮನೆಯ ಹಬ್ಬದಂತೆ ಆಚರಿಸಬೇಕಾಗಿದೆ.
ಈ ವೇಳೆ ಹಬ್ಬತ್ತನಹಳ್ಳಿ ಶ್ರೀನಿವಾಸ್, ಗಂಗಿಕಟ್ಟೆ ನಿಂಗಣ್ಣ,ಹುಣಸಮಾರನಹಳ್ಳಿ ಶಿವರಾಜು,ಕೋರ ರಾಜು, ಜೆಸಿಬಿ ವೆಂಕಟೇಶ್, ರಂಜನ್, ಸಿದ್ದೇಶ್ ನೇಗಲಾಲ್,ಗೋಪಾಲ್, ಕೆ.ಸುಮ,ಲಕ್ಷಿö್ಮದೇವಮ್ಮ, ಗೂಳೂರು ರಾಜಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.