ತುಮಕೂರು ರಿಸರ್ಚ್ ಫೌಂಡೇಶನ್ ಉದ್ಘಾಟನೆ
ತುಮಕೂರು: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವ ದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸೋಮವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆ ಮತ್ತು ತುಮಕೂರು ರಿಸರ್ಚ್ ಫೌಂಡೇಶನ್ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕಿನ ಸರಳತೆಯನ್ನು ನಾವೆಲ್ಲರೂ ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಇತಿಹಾಸ ಇಂದಿಗೂ ನೆನೆಯುವುದು ಬುದ್ಧ, ಬಸವಣ್ಣ ಹಾಗೂ ಗಾಂಧೀಜಿಯವರನ್ನು. ಎಲ್ಲರ ಮನಸ್ಸಿನ ಪರಿವರ್ತನೆಗೂ ಬಹುಮುಖ್ಯ ಪಾಠವಾಗಿ ಬದುಕಿ, ‘ನನ್ನ ಜೀವನವೇ ನನ್ನ ಸಂದೇಶ’ ಎಂದು ತಮ್ಮ ಬದುಕನ್ನು ಆದರ್ಶಯುತವಾಗಿ ಮುನ್ನಡೆಸಿದ ಮಹಾನ್ ಚೇತನ ಗಾಂಧೀಜಿ ಎಂದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು ಸರಳತೆಗೆ ಕನ್ನಡಿಯಾಗಿತ್ತು. ತಮ್ಮ ಕರ್ತವ್ಯ ನಿಷ್ಠೆಗೆ ಹೆಸರಾಗಿ ದೇಶದ ಏಳ್ಗೆಗಾಗಿ ಹಗಲಿರುಳು ದುಡಿದ ಸಜ್ಜನ ಪ್ರಧಾನಿ ಶಾಸ್ತ್ರಿ ಅವರು ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶ ಕಂಡಂತಹ ಶ್ರೇಷ್ಠ ಅಪ್ರತಿಮ ನಾಯಕ. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದು ಮಾತ್ರವಲ್ಲದೆ, ದೇಶದ ಪ್ರಧಾನಿಯಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡಿದ ಕೀರ್ತಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಸಲ್ಲಬೇಕು ಎಂದರು.
ಪ್ರತಿಯೊಬ್ಬರೂ ಮಹಾತ್ಮಾಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಚರಿತ್ರೆಯನ್ನು ಓದಬೇಕು. ಆಗ ನಮಗೆ ಏನನ್ನಾದರೂ ಸಾಧಿಸಲು ಸ್ಫೂರ್ತಿ ಮತ್ತು ಉತ್ಸಾಹ ಬರುತ್ತದೆ. ಮಹಾತ್ಮಾಗಾಂಧೀಜಿ ಅವರು ಪ್ರಪಂಚಕ್ಕೆ ಮಾದರಿಯಾದವರು. ಗಾಂಧೀ ಜಯಂತಿಯನ್ನು ಭಾರತ ಮಾತ್ರವಲ್ಲದೆ ಪ್ರಪಂಚದ ನಾನಾ ದೇಶಗಳು ಇಂದು ಆಚರಣೆ ಮಾಡುತ್ತಿವೆ ಎಂದರು.
ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ರಿಸರ್ಚ್ ಫೌಂಡೇಶನ್ ಗುರಿಯನ್ನು ಎಲ್ಲಾ ಅಧ್ಯಾಪಕರು ಸದ್ಬಳಕೆ ಮಾಡಿಕೊಳ್ಳಬೇಕು. ಇದಕ್ಕೆ ತಮ್ಮ ಸಂಪೂರ್ಣ ಶ್ರಮವಹಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯೋಜಕ ಡಾ. ಮಂಜುನಾಥ್ ಎ. ಎಂ. ಭಾಗವಹಿಸಿದ್ದರು.
ವಿವಿಯಲ್ಲಿ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಜಯಂತಿ

Leave a comment
Leave a comment


