ತುಮಕೂರು : ದಿಬ್ಬೂರು ಕನ್ನಡಿಗರ ಯುವ ವೇದಿಕೆ ವತಿಯಿಂದ 2025ರ ಜನವರಿ 03 ಶುಕ್ರವಾರ, 04 ಶನಿವಾರ, 05 ಭಾನುವಾರ ಈ ಮೂರು ದಿನಗಳಂದು ವೈಭವದ ಕನ್ನಡ ರಾಜ್ಯೋತ್ಸವವನ್ನು ನಗರದ 6ನೇ ವಾರ್ಡ್ ದಿಬ್ಬೂರಿನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕರಾದ ಇಂದ್ರಕುಮಾರ್ ಡಿ.ಕೆ. ತಿಳಿಸಿದ್ದಾರೆ.ಮೊದಲನೆಯ ದಿನವಾದ 03-01-2025ರ ಶುಕ್ರವಾರದಂದು ಬೆಳಿಗ್ಗೆ 11.00ಕ್ಕೆ ತಾಯಿ ಭುವನೇಶ್ವರಿ ಪುತ್ಥಳಿಗೆ ಜಿಲ್ಲಾಧಿಕಾರಿಗಳಾದ ಶುಭಾಕಲ್ಯಾಣ್ ಮತ್ತು ಅಪರ ಜಿಲ್ಲಾಧಿಕಾರಿಗಳಾದ ತಿಪ್ಪೇಸ್ವಾಮಿರವರು ಪುಷ್ಪನಮನ ಸಲ್ಲಿಸುವುದರ ಮೂಲಕ ಮೆರವಣಿಗೆ ಹಾಗೂ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಚಾಲನೆಯನ್ನು ನೀಡಲಿದ್ದು, ವಿವಿಧ ಜಾನಪದ ಕಲಾ ತಂಡ ಹಾಗೂ ವೈವಿದ್ಯಮಯ ಕಲಾವಿದರ ತಂಡದಿoದ ಮನಮೋಹಕವಾದ ಭವ್ಯ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಛೇರಿಯಿಂದ ಹೊರಟು, ಗಾರ್ಡನ್ ರಸ್ತೆಯ ಮಾರ್ಗವಾಗಿ ದಿಬ್ಬೂರು ತಲುಪಿ ನಂತರ ಧ್ವಜಾರೋಹಣವನ್ನು ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ. ಅಂದು ಸಂಜೆ 6.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡಸೇನೆಯ ಜಿಲ್ಲಾಧ್ಯಕ್ಷರಾದ ಧನೀಯ ಕುಮಾರ್, ಜಿಲ್ಲೆಯ ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಅಥಣಿ ಕನ್ನಡ ಚಲನಚಿತ್ರದ ಧ್ವನಿಸುರಳಿ ಬಿಡುಗಡೆ, ಸ್ಪಾರ್ಕಲ್ ಡ್ಯಾನ್ಸ್ ಸ್ಟುಡಿಯೋ ಇವರಿಂದ ವಿಶೇಷ ನೃತ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮಕ್ಕೆ ಕನ್ನಡ ಚಲನಚಿತ್ರದ ಖ್ಯಾತ ನಟರಾದ ನವಗ್ರಹ ಚಲನಚಿತ್ರ ಖ್ಯಾತಿಯ ಧರ್ಮಕೀರ್ತಿ ರಾಜ್, ನಾಗೇಂದ್ರ ಅರಸ್ ಆಗಮಿಸಲಿದ್ದಾರೆ ತಿಳಿಸಿದರು.ಎರಡನೇ ದಿನವಾದ 04-01-2025ರ ಶನಿವಾರದಂದು ಸಂಜೆ 6.00ಕ್ಕೆ ಮಾನ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿಗಳಾದ ಡಾ. ಜಿ.ಪರಮೇಶ್ವರ, ರಾಜ್ಯ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್ (ವಾಸಣ್ಣ), ವಿಧಾನಪರಿಷತ್ ಸದಸ್ಯರಾದ ಆರ್.ರಾಜೇಂದ್ರ ಇವರುಗಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅಂದಿನ ವಿಶೇಷ ಜ್ಯೂನಿಯರ್ ರಾಜ್ಕುಮಾರ್ ಎಂದೇ ಖ್ಯಾತಿಗಳಿಸಿರುವ ಅಶೋಕ್ ಬಸ್ತಿ ಮತ್ತು ಶಿವು ಜಯಪುರ ಅರ್ಪಿಸುವ ಓಂಕಾರ್ ಮೆಲೋಡಿಸ್ ಆರ್ಕೆಸ್ಟ್ರಾ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮವಿದ್ದು ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ವಿನೋದ್ ಪ್ರಭಾಕರ್, ಜೂನಿಯರ್ ಅಪ್ಪು ಇವರುಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಬೆರಗು ತಂದು ಕೊಡಲಿದ್ದಾರೆ ಎಂದು ತಿಳಿಸಿದ್ದಾರೆ.ಮೂರನೇ ಹಾಗೂ ಸಮಾರೋಪ ಸಮಾರಂಭವು 05-01-2025ರ ಭಾನುವಾರದಂದು ನಡೆಯಲಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವರು, ತುಮಕೂರು ಲೋಕಸಭಾ ಸಂಸದರಾದ ವಿ.ಸೋಮಣ್ಣ, ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬೆಂಗಳೂರು ಕೇಂದ್ರ ಸಂಸದರಾದ ಪಿ.ಸಿ.ಮೋಹನ್, ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರು ಮತ್ತು ನಿಕಟಪೂರ್ವ ಅಧ್ಯಕ್ಷರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಮೋರ್ಚಾ ಡಾ. ಚಿ.ನಾ.ರಾಮು, ಕೊಳಚೆ ನಿರ್ಮೂಲನ ಮಂಡಳಿ
ರಾಜ್ಯಾಧ್ಯಕ್ಷರಾದ ಕ್ರಾಂತಿರಾಜ್ ಸೇರಿದಂತೆ ವಿವಿಧ ಗಣ್ಯರು ಚಾಲನೆ ನೀಡಲಿದ್ದು, ಜೀ ಕನ್ನಡ ವಾಹಿನಿ ಖ್ಯಾತಿಯ ಕಂಬದ ರಂಗಯ್ಯ, ಜೀ ಕನ್ನಡ ಸರಿಗಮಪ ಖ್ಯಾತಿಯ ದರ್ಶನ್ ನಾರಾಯಣ್ ತಂಡದಿoದ ಸಂಗೀತ ರಸಸಂಜೆ ಹಾಗೂ ಹಾಸ್ಯ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಮಿಮಿಕ್ರಿ ಗೋಪಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘು (ರಾಗಿಣಿ), ನಯನ, ಸುಷ್ಮಿತ, ಜಗ್ಗಪ್ಪ, ವಿನೋದ್ ಗೊಬ್ರಗಾಲ, ಚಂದ್ರಪ್ರಭ, ಗಿಲ್ಲಿ ನಟ ಸೇರಿದಂತೆ ವಿವಿಧ ಕಲಾವಿದರಿಂದ ವಿಶೇಷ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.ಮೂರು ದಿನ ನಡೆಯುತ್ತಿರುವ ಈ ಕನ್ನಡಿಗರ ಹಬ್ಬಕ್ಕೆ ತುಮಕೂರು ಜನತೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮದ ರಸದೌತಣವನ್ನು ಆನಂದಿಸಬೇಕು ಎಂದು ದಿಬ್ಬೂರು ಕನ್ನಡಿಗರ ಯುವ ವೇದಿಕೆಯ ವತಿಯಿಂದ ಇಂದ್ರಕುಮಾರ್ ಡಿ.ಕೆ.ರವರು ಮನವಿ ಮಾಡಿರುತ್ತಾರೆ.