ತುಮಕೂರು : ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಟೆಂಡರ್ ಕರೆಯುವ ಪ್ರಕ್ರಿಯೆಯಲ್ಲಿ ನಾನು ಮೂಗು ತೂರಿಸುತ್ತಿರುವೆ ಎಂದು ಆಪಾದಿಸಿರುವ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ತಮ್ಮ ಬಳಿ ಇರುವ ಎಲ್ಲ ದಾಖಲೆಗಳ ಸಮೇತ ನಾನೂ ಸೇರಿದಂತೆ ತಮ್ಮದೇ ಸರ್ಕಾರದ ಎಲ್ಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ ಗೌಡರು ಪ್ರಶ್ನಿಸಿದ್ದಾರೆ. ಭ್ರಷ್ಟಾಚಾರ ಮತ್ತು ಬ್ಲ್ಯಾಕ್ ಮೇಲ್ ರಾಜಕಾರಣಕ್ಕೆ ಅವರ ತಂದೆಯ ಕಾಲದಿಂದಲೂ ಹೆಸರಾದ ಗೌರಿಶಂಕರ್ ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಭೂತದ ಬಾಯಿಯಲ್ಲಿ ಭಗವದ್ಗೀತೆ ಕೇಳಿದಂತೆ ಇದೆ ಎಂದು ಅವರು ಪ್ರಕಟಣೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ʻರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದವರ ಹಾಗೆ ಗೌರಿಶಂಕರ್ ಮಾತನಾಡುತ್ತಿದ್ದಾರೆ. ಇಲ್ಲಿ ಭ್ರಷ್ಟಾಚಾರ ನಡೆದರೆ ಅದನ್ನು ತಡೆಯಬೇಕಾದುದು ಆಡಳಿತ ಪಕ್ಷದ ಕರ್ತವ್ಯ. ಅಕ್ರಮಗಳು ನಡೆದರೆ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದುದೂ ಆಡಳಿತ ಪಕ್ಷದ ಕರ್ತವ್ಯವೇ ಆಗಿದೆ ತಮ್ಮ ಕರ್ತವ್ಯ ನಿಭಾಯಿಸುವುದು ಬಿಟ್ಟು ಮಾಧ್ಯಮದ ಮುಂದೆ ಗೌರಿಶಂಕರ್ ಬೊಗಳೆ ಬಿಡುತ್ತಿರುವುದು ಹಾಸ್ಯಾಸ್ಪದವಾಗಿದೆʼ ಎಂದು ಅವರು ಕುಟುಕಿದ್ದಾರೆ. ʻಜಿಲ್ಲಾ ಉಸ್ತುವಾರಿ ಸಚಿವರಿಗೆ ಚಮಚಾಗಿರಿ ಮಾಡಿಕೊಂಡು ತಿರುಗುವುದರಲ್ಲಿಯೇ ಆನಂದ ಅನುಭವಿಸುತ್ತಿರುವ ಗೌರಿಶಂಕರ್ ಇಂಥ ಗುರುತರ ವಿಚಾರಗಳನ್ನು ಅವರ ಗಮನಕ್ಕೆ ಇದುವರೆಗೆ ಏಕೆ ತಂದಿಲ್ಲ? ಗೌರಿಶಂಕರ್ ಎಂಬ ಮಹಾನುಭಾವರು ಯಾವ ಅಧಿಕಾರಿಗಳನ್ನು ಕರೆಸಿ ಅವರಿಂದ ಏನು ಕಮಿಷನ್ ಕೇಳಿದ್ದಾರೆ ಎಂಬ ದಾಖಲೆ ನನ್ನ ಬಳಿ ಇದೆ. ಚುನಾವಣೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ಎಸಗಿ ಅನರ್ಹತೆ ಎದುರಿಸುತ್ತಿರುವ ಈ ಮಾಜಿ ಶಾಸಕರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದನ್ನು ನೋಡಿದರೆ ಅವರಿಗೆ ನನ್ನ ಹೆಸರು ಹೇಳದೇ ಇದ್ದರೆ ತಿಂದ ಕೂಳು ಕರಗುವುದಿಲ್ಲ ಎಂದು ಅರ್ಥವಾಗುತ್ತದೆʼ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ʻನಾನು ವಿರೋಧ ಪಕ್ಷದ ಶಾಸಕ. ಒಂದು ರೂಪಾಯಿ ಅನುದಾನವನ್ನೂ ಕ್ಷೇತ್ರಕ್ಕೆ ತರಲು ಒದ್ದಾಡುವಂಥ ಸ್ಥಿತಿ ಇದೆ. ಇದಕ್ಕಾಗಿ ಬೀದಿಗಿಳಿದು ಹೋರಾಟವನ್ನೂ ಮಾಡಿದ್ದೇವೆ. ಆದರೂ ಈ ದರಿದ್ರ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಅಂಥ ಸಮಯದಲ್ಲಿ ಯಾವ ಟೆಂಡರ್ ಅನ್ನು ನನ್ನನ್ನು ಕೇಳಿ ಮಾಡುತ್ತಾರೆ, ಯಾವ ಅಭಿವೃದ್ಧಿ ಕೆಲಸವನ್ನು ನನ್ನನ್ನು ಕೇಳಿ ಮಾಡುತ್ತಾರೆ? ಇಷ್ಟು ಕನಿಷ್ಠ ಜ್ಞಾನವೂ ಇಲ್ಲದ ಗೌರಿಶಂಕರ್ ನನ್ನ ವಿರುದ್ಧ ಹುರುಳು ಇಲ್ಲದ ಆರೋಪ ಮಾಡಿದ್ದಾರೆʼ ಎಂದು ಅವರು ಟೀಕಿಸಿದ್ದಾರೆ. ʻಗೌರಿಶಂಕರ್ ಉಲ್ಲೇಖಿಸಿರುವ ಯಾವ ಕೆಲಸಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಬಾಯಿಚಪಲಕ್ಕೆ ಅವರು ಆರೋಪ ಮಾಡಿದರೆ ಪ್ರಯೋಜನವಿಲ್ಲ. ಅದರಿಂದ ಆಡಳಿತದಲ್ಲಿ ಪಾರದರ್ಶಕತೆಯೂ ಬರುವುದಿಲ್ಲ, ಅಕ್ರಮಗಳೂ ನಿಲ್ಲುವುದಿಲ್ಲ. ಅವರಿಗೆ ಆಡಳಿತದಲ್ಲಿ ಅಂಥ ಸ್ವಚ್ಛತೆ, ಪ್ರಾಮಾಣಿಕತೆ ಬೇಕು ಎಂದು ಅವರಿಗೆ ಅನಿಸಿದ್ದರೆ ಅವರೇ ಹೇಳಿದ ಹಾಗೆ, ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ, ಲೋಕಾಯುಕ್ತಕ್ಕೆ ದೂರು ನೀಡಲಿ. ತಮಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡು ತಮ್ಮ ವಸೂಲಿ ದಂಧೆ ಮುಂದುವರಿಸಲಿʼ ಎಂದು ಸುರೇಶಗೌಡರು ಛೇಡಿಸಿದ್ದಾರೆ. ʻಆಡಳಿತ ಪಕ್ಷದ ಶಾಸಕರ ಕಿರುಕುಳ ಮತ್ತು ಹಪ್ತಾ ವಸೂಲಿ ದಂಧೆಯಿಂದ ಈಗಾಗಲೇ ರಾಜ್ಯದ ಆದ್ಯಂತ ಅಧಿಕಾರಿಗಳು ನೇಣಿಗೆ ಶರಣಾಗುತ್ತಿದ್ದಾರೆ. ಬಹುಶಃ ಗೌರಿಶಂಕರ್ ಅವರೂ ಈಗ ಯಾವುದಾದರೂ ಅಧಿಕಾರಿಯನ್ನು ನೇಣಿಗೆ ಏರಿಸಲು ಹೊರಟಿರಬಹುದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೇ ಈಗ ನಮ್ಮ ಪಕ್ಷದ ಕಾರ್ಯಕರ್ತನ ಸಾವಿಗೆ ಕಾರಣರಾಗಿದ್ದು ಅವರ ಹೆಸರು ಎಫ್ಐಆರ್ನಲ್ಲಿ ಇರದೇ ಇರುವುದು ಈ ರಾಜ್ಯದ ಪೊಲೀಸ್ ಇಲಾಖೆ ಹೇಗೆ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ ಎಂಬುದಕ್ಕೆ ನಿದರ್ಶನವಾಗಿದೆ. ಬಹುಶಃ ಇದೇ ಗೌರಿಶಂಕರ್ ಅವರಿಗೂ ಇಂಥ ಬ್ಲ್ಯಾಕ್ಮೇಲ್ ರಾಜಕಾರಣ ಮಾಡಲು ಪ್ರೇರಣೆ ನೀಡಿರಬಹುದುʼ ಎಂದು ಅವರು ತಿಳಿಸಿದ್ದಾರೆ. ʻಇಂಥ ಪೊಳ್ಳು ಬೆದರಿಕೆಗಳಿಗೆ ನಾನು ಹೆದರುವುದೂ ಇಲ್ಲ, ಮಣಿಯುವುದೂ ಇಲ್ಲ. ಗೌರಿಶಂಕರ್ ಇಂಥ ಹುರುಳು ಇಲ್ಲದ ಆರೋಪಗಳನ್ನು ಮಾಡುವ ಬೇಜವಾಬ್ದಾರಿತನವನ್ನು ಇನ್ನಾದರೂ ನಿಲ್ಲಿಸಿ ಸಾರ್ವಜನಿಕ ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಒಂದಿಷ್ಟು ತಿಳಿವಳಿಕೆ ಬೆಳೆಸಿಕೊಳ್ಳಬೇಕುʼ ಎಂದು ಸುರೇಶಗೌಡರು ಸಲಹೆ ಮಾಡಿದ್ದಾರೆ.