ತುಮಕೂರು: ವಿಪರ್ಯಾಸಗಳನ್ನು ಗ್ರಹಿಸಿ ಬೆಳೆಯುವ ಕಲೆ ಲೋಕಗ್ರಹಿಕೆಯನ್ನು ಕೇಂದ್ರೀಕರಿಸಿ ಜಾಗೃತಿಯ ಚಲನೆಯನ್ನು ಅಂತರ್ಯದಲ್ಲಿ ಸೃಷ್ಟಿಸುತ್ತದೆ ಎಂದು ಹಿರಿಯ ಸಾಹಿತಿ ಹೇಳಿದರು.
ತುಮಕೂರು ವಿವಿಯ ಸ್ನಾತಕೋತ್ತರ ಡಿವಿಜಿ ಕನ್ನಡ ಅಧ್ಯಯನ ಕೇಂದ್ರ ಹಾಗೂ ಇಂಗ್ಲಿಷ್ ಸಾಹಿತ್ಯ ಅಧ್ಯಯನ ವಿಭಾಗವು ಜಂಟಿಯಾಗಿ ಆಯೋಜಿಸಿದ್ದ ‘ಕಲೆಯ ಮೂಲಕ ಲೋಕಗ್ರಹಿಕೆ’ ಎಂಬ ಪರಿಕಲ್ಪನೆಯಲ್ಲಿ ‘ಸಹಿತ’ ಸಾಹಿತ್ಯೋತ್ಸವವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಅರ್ಥವಾಗದೇ ಇರುವ ಅರ್ಥವಾಗಬೇಕಿರುವ ವಿಷಯವೇ ಲೋಕಗ್ರಹಿಕೆ. ಕಲೆಯ ಸಂಗತಿ ಚಲನೆಯಾಗಿದೆ. ಮಾತಿನಿಂದ, ಹಕ್ಕಿಯ ಸ್ವರದಿಂದ, ಅಥವಾ ಯಾವುದರಿಂದಲಾದರೂ ಒಂದು ಚಲನೆ ಉಂಟಾಗಲಿದೆ. ಅದುವೇ ಜೀವ ಕಲೆ-ಕಳೆ. ಅನುಭವದಿಂದ ಬಾಗುವ, ಹೊಸ ಅರ್ಥದ ಸಂಚಾರವೇ ಕಲೆಯಾಗಿದೆ ಎಂದರು.
ನೆಮ್ಮದಿಯ ಕಾಲದಲ್ಲಿ ಉಂಟಾಗದ ಜಾಗೃತಿಯು ಕಷ್ಟ, ಸಂಕಟಗಳಲ್ಲಿ ಮೂಡುತ್ತದೆ. ಸಂಕಟದಲ್ಲಿ ಉಂಟಾದ ಜಾಗೃತಿಯೇ ಕಲೆಯ ನಿಯಮ. ಕಷ್ಟಕಾಲದಲ್ಲಿಯೇ ರಾಮಾಯಣ, ಮಹಾಭಾರತ ಗ್ರಂಥಗಳು ವರ್ಣಿತವಾದದ್ದು, ಚಿತ್ರಿತವಾದದ್ದು. ಕಲೆಯ ಅನಾವರಣದಿಂದ ಕಾಲ ಈ ರೀತಿ ಇರಬಾರದು ಎಂದು ತೋರಿಸುತ್ತದೆ. ಲೋಕಕ್ಕೆ ಕಟ್ಟೆ ಇರಬಾರದು ಎಂಬುದನ್ನು ಪ್ರಸ್ತುತಪಡಿಸುತ್ತದೆ ಕಲೆ ಎಂದು ತಿಳಿಸಿದರು.
ಕಲೆಯಿಂದ ಲೋಕಗ್ರಹಿಕೆ, ಅಂತರ್ಯದ ಜಾಗೃತಿ

Leave a comment
Leave a comment