ತುಮಕೂರು: ಕಲೆ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ ಇವೆಲ್ಲವೂ ಜಾನಪದ ಸಂಸ್ಕೃತಿಯ ಬೇರು. ಜಾನಪದ ಸಂಸ್ಕೃತಿಯನ್ನು ಮರೆತರೆ ನಮ್ಮತನವನ್ನು ಬಿಟ್ಟಂತೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರವು ಬುಧವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ಬುಡಕಟ್ಟು ನಾಯಕ ಬಿರ್ಸಾಮುಂಡ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಹಿರಿಮೆ ಬಹಳ ದೊಡ್ಡದು. ಹಿಂದೆ ಇದ್ದ ಜಾನಪದ ಆಟಗಳು, ಕೃಷಿ ಪದ್ಧತಿ, ಚಿಕಿತ್ಸಾ ಕ್ರಮ, ನೈಸರ್ಗಿಕ ಕಲೆಗಳು ಇಂದು ಇಲ್ಲವಾಗಿವೆ. ಗ್ರಾಮೋದ್ಧಾರದಿಂದ ಜಾನಪದ ಸಂಸ್ಕೃತಿಯನ್ನು ಉಳಿಸಬಹುದು. ಆದ್ದರಿಂದ ಕನ್ನಡ ವಿಭಾಗವು ಜಾನಪದ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕಾರ್ಯಗಳನ್ನು ಮಾಡಬೇಕು ಎಂದರು.
ಲೇಖಕ ಡಾ. ಹನಿಯೂರು ಚಂದ್ರೇಗೌಡ ಮಾತನಾಡಿ, ಜಾನಪದ ಮತ್ತು ಬುಡಕಟ್ಟು ಸಂಸ್ಕೃತಿಯನ್ನು ಒಳಗೊಂಡ ಸಮುದಾಯದ ಅರಿವು, ಪ್ರಜ್ಞೆ ಎಲ್ಲರಿಗೂ ಅಗತ್ಯವಿದೆ. ಜಾನಪದಕ್ಕೆ ಅಶ್ಲೀಲವಿಲ್ಲ. ಜನಪದ ಗೀತೆಗಳ ಭಾವವನ್ನು ಅನುಭವಿಸಬೇಕು. ಹಿರಿಯರ ಜಾನಪದ ಆಶಯಗಳನ್ನು ಆಲಿಸಬೇಕು ಎಂದು ಹೇಳಿದರು.
ಬುಡಕಟ್ಟು ಸಮುದಾಯದ ಹಾಗೂ ಜಾನಪದ ಸಂಸ್ಕೃತಿಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕು. ನಶಿಸಿಹೋಗಿರುವ ಹಲವಾರು ಸಮುದಾಯಗಳ ಬದುಕು, ಕಲೆ, ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ಬೆಳೆಸಬೇಕು ಮತ್ತು ಜೀವಂತವಾಗಿರಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದರು.
ಕಾರ್ಯಕ್ರಮದ ಸಂಯೋಜಕ ಡಾ. ಪಿ. ಎಂ. ಗಂಗಾಧರಯ್ಯ ಮಾತನಾಡಿ, ಜಾನಪದ ನಮ್ಮ ಸಂಸ್ಕೃತಿ. ಪ್ರಾದೇಶಿಕ ಅನುಭವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ನಂಬಿಕೆಗಳನ್ನು ಕಟ್ಟಿಕೊಂಡು ಬೆಳವಣಿಗೆಯಾಗಲು ಜಾನಪದ ಸಾಹಿತ್ಯವೇ ಕಾರಣವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಡಿ. ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಭಾಗವಹಿಸಿದ್ದರು.
ಜಾನಪದ ಸಂಸ್ಕೃತಿಯನ್ನು ಮರೆತರೆ ನಮ್ಮತನವನ್ನು ಬಿಟ್ಟಂತೆ

Leave a comment
Leave a comment