ತುಮಕೂರು: 2028ರ ವೇಳೆಗೆ 5 ಟ್ರಿಲಿಯನ್ ಆರ್ಥಿಕತೆಯನ್ನು ಭಾರತ ತಲುಪುವ ಮೂಲಕ ಚೀನಾದಿಂದ ಜಾಗತಿಕ ನಾಯಕತ್ವವನ್ನು ತನ್ನದಾಗಿಸಿಕೊಳ್ಳುವತ್ತ ದಾಪುಗಾಲಿಡುತ್ತಿದೆ. ಇಡೀ ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ ಎಂದು ನಾಗಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ನಿರ್ದೇಶಕ ಪ್ರೊ. ಭೀಮರಾಯ ಮೇತ್ರಿ ಸಂತಸ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಬುಧವಾರ ಆಯೋಜಿಸಿದ್ದ ‘ಸುಸ್ಥಿರ ಅಭಿವೃದ್ಧಿಗಾಗಿ ಜಾಗತಿಕ ಆವಿಷ್ಕಾರಗಳು: ಅವಕಾಶಗಳು ಮತ್ತು ಸವಾಲುಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
ಜನನ ಪ್ರಮಾಣ ಹಾಗೂ ಯುವಕರ ಸಂಖ್ಯೆ ಕಡಿಮೆ ಇರುವ ದೇಶಗಳಾದ ಕೆನಡಾ, ಅಮೇರಿಕ, ಇಂಗ್ಲೆoಡ್, ಯುರೋಪ್ಗಳಲ್ಲಿ ಜಾಗತಿಕ ಪುನರ್ರಚನೆಯಾಗುತ್ತಿದೆ. ವಲಸೆ ಪ್ರಮಾಣ ಹೆಚ್ಚುತ್ತಿದೆ. ಭಾರತದ ಆರ್ಥಿಕತೆಯ ಅಭಿವೃದ್ಧಿಯನ್ನು ನೋಡಿದ ಚೀನಾ ಒಂದು ಮಗುವಿನ ನೀತಿಯನ್ನು ಹಿಂಪಡೆದಿದೆ. ಭಾರತದಲ್ಲಿ ಯುವಶಕ್ತಿಯ ಪ್ರಮಾಣ ಶೇ.65 ರಷ್ಟಿದೆ ಎಂದು ತಿಳಿಸಿದರು.
1980ರಿಂದ 85ರ ವರೆಗೂ ಉತ್ತಮ ಆರ್ಥಿಕತೆಯ ದೇಶವಾಗಿದ್ದ ಜಪಾನ್ ಅನ್ನು 21ನೆಯ ಶತಮಾನದ ಆರಂಭದಲ್ಲಿ ಸಿಂಗಾಪುರ್ ಹಿಂದಿಕ್ಕಿತು. ನಂತರದ ಬೆಳವಣಿಗೆಯಲ್ಲಿ ಪ್ರಪಂಚದ ಸಿಮೆಂಟ್ ಉತ್ಪಾದನೆಯ ಶೇ. 50ರಷ್ಟು, ಶೇ.35ರಷ್ಟು ಉಕ್ಕನ್ನು ಬಳಸಿ ಮೂಲಸೌರ್ಕಗಳನ್ನು ಅಭಿವೃದ್ಧಿ ಪಡಿಸಿದ ಚೀನಾ ಎಲ್ಲರನ್ನೂ ಹಿಂದಿಕ್ಕಿ ಸೂಪರ್ ಎಕಾನಮಿಯ ದೇಶಗಳಲ್ಲಿ ಅಗ್ರಸ್ಥಾನಕ್ಕೇರಿತು ಎಂದು ತಿಳಿಸಿದರು.
ವಿದೇಶಿ ನೇರ ಹೂಡಿಕೆಯಿಂದಾಗಿ ಅತ್ಯಧಿಕ ಉತ್ಪಾದನಾ ದೇಶವಾಗಿ ಚೀನಾ ತನ್ನ ಆರ್ಥಿಕತೆಯನ್ನು ಮೇಲ್ಪಂಕ್ತಿಯಲ್ಲಿ ಕೊಂಡೊಯ್ಯುವಷ್ಟು ಪ್ರಬಲವಾಯಿತು. ಜಿಡಿಪಿಯಲ್ಲಿ ಎರಡನೆಯ ಸ್ಥಾನದಲ್ಲಿದ್ದರೂ ಕೋವಿಡ್ ಸಂದರ್ಭದಲ್ಲಿ ಚೀನಾದಿಂದ ರಫ್ತಾಗಬೇಕಿದ್ದ ಉತ್ಪನ್ನಗಳು ನಿಂತ ಕಾರಣ ಹಲವು ದೇಶಗಳಲ್ಲಿ ಸಮಸ್ಯೆಯಾಯಿತು. ಅಷ್ಟರ ಮಟ್ಟಿಗೆ ಚೀನಾ ಮೇಲೆ ನಾವೆಲ್ಲರೂ ಅವಲಂಬಿತರಾಗಿದ್ದೇವೆ ಎಂದರು.