ತುಮಕೂರು: ವಿವಿಧ ಇಲಾಖೆ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ಖಂಡಿಸಿ ಜಿಲ್ಲೆಯ ಅರ್ಥ್ ಮೂವರ್ಸ್ ವಾಹನ ಮಾಲೀಕರು ಸೋಮವಾರ ನಗರದಲ್ಲಿ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು. ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿದ ಅರ್ಥ್ ಮೂವರ್ಸ್ ವಾಹನಗಳ ಮಾಲೀಕರು, ಚಾಲಕರು, ತಮ್ಮ ಸಮಸ್ಯೆ ನಿವಾರಣೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲಾ ಅರ್ಥ್ ಮೂವರ್ಸ್ ಸಂಘದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಸದಸ್ಯರೂ ಆದ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ರೈತರ ಕೃಷಿ ಚಟುವಟಿಕೆಗಳ ಕೆಲಸಗಳಲ್ಲಿ ತೊಡಗುವ ಅರ್ಥ್ ಮೂವರ್ಸ್, ಟಿಪ್ಪರ್ ವಾಹನಗಳನ್ನು ಅಧಿಕಾರಿಗಳು ರಸ್ತೆಯಲ್ಲಿ ಅಡ್ಡಗಟ್ಟಿ ಮನಸೋ ಇಚ್ಚೆ ದಂಡ ವಿಧಿಸುವ ಪ್ರಕರಣಗಳು ಹೆಚ್ಚಾಗಿವೆ. ಅಧಿಕಾರಿಗಳ ಇಂತಹ ಧೋರಣೆಯಿಂದ ವಾಹನಗಳ ಮಾಲೀಕರು ನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ. ಅಧಿಕಾರಿಗಳಿಗೆ ಸೂಕ್ತ ನಿರ್ದೇಶ ನೀಡಿ, ಕಿರುಕುಳ ತಪ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ವಾಹನ ಮಾಲೀಕರಿಗೆ ಅಧಿಕಾರಿಗಳು ನೀಡುವ ಅನಗತ್ಯ ಕಿರುಕುಳ ತಪ್ಪದಿದ್ದರೆ ಅರ್ಥ್ ಮೂವರ್ಸ್, ಟಿಪ್ಪರ್ ಲಾರಿಗಳನ್ನು ತಂದು ಜಿಲ್ಲಾಧಿಕಾರಿ ಕಚೇರಿ ಎದುರು ನಿಲ್ಲಿಸಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಸರ್ಕಾರದ ಇಲಾಖೆಗಳ ಕೆಲಸಗಳಿಗೆ ನಿಯಮಾನುಸಾರ ರಾಯಲ್ಟಿ ಪಾವತಿಸಿ ಅನುಮತಿ ಪಡೆಯಲಾಗುತ್ತದೆ. ಆದರೆ ರೈತರ ಕೃಷಿ ಸಂಬAಧಿತ ಕೆಲಸ ನಿರ್ವಹಿಸಲು ರಿಯಾಯಿತಿ ನೀಡಬೇಕು. ನಿಗಧಿತ ಕೆಲಸಗಳಿಗೆ ಅನುಮತಿ ಪಡೆಯಲು ಇಲಾಖೆಗಳಿಂದ ವಿಳಂಬವಾಗುತ್ತಿದೆ. ಇಂತಹ ಸಮಸ್ಯೆ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.
ಜಿಲ್ಲಾ ಅರ್ಥ್ ಮೂವರ್ಸ್ ವಾಹನಗಳ ಸಂಘದ ಜಿಲ್ಲಾಧ್ಯಕ್ಷ ಧರ್ಮಪಾಲ್ ಎಂ. ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ತುಮಕೂರಿನಲ್ಲಿ ಸಿಗುವ ಮಣ್ಣಿಗೂ ಬಳ್ಳಾರಿಯಲ್ಲಿ ಸಿಗುವ ಮೈನ್ಸ್ ಮಣ್ಣಿಗೂ ಒಂದೇ ರೀತಿಯ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಇದನ್ನು ಅಧಿಕಾರಿಗಳು ಕೈಬಿಡಬೇಕು ಎಂದು ಆಗ್ರಹಿಸಿದರು.