ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ: ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು
ತುಮಕೂರು: ಸೃಜನಶೀಲತೆ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಗೋಡೆ ಪತ್ರಿಕೆ ‘ಯುವ ಮಂಥನ’ ಜುಲೈ ೨೦೨೩ ಸಂಚಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದರು.
ಕೌಶಲ್ಯ ಹೊಸತನ್ನು ಕಾಣುವ, ಕಟ್ಟುವ ಚಿಂತನಶೀಲರನ್ನಾಗಿಸುತ್ತದೆ. ವಿದ್ಯಾರ್ಥಿಗಳು ತರಗತಿಗಳಲ್ಲಿ ಕಲಿಯುವ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವನ್ನು ಸಮಕಾಲೀನ ಸಮಾಜ ಮತ್ತು ಪರಿಸರದಿಂದ ಕಲಿಯುತ್ತಾರೆ. ಅಷ್ಟೇ ಅಲ್ಲದೆ, ವಿವಿಧ ಕಲಾ ಮಾಧ್ಯಮಗಳ ಮೂಲಕ ತಮ್ಮ ಚಿಂತನೆಗಳಿಗೆ ಅಭಿವ್ಯಕ್ತಿಯ ಸ್ವರೂಪವನ್ನು ನೀಡುತ್ತಾರೆ ಎಂದರು.
ಈ ಅಭಿವ್ಯಕ್ತಿಯ ವಿಧಾನ ಅವರಲ್ಲಿ ಸಂಶೋಧನ ಮತ್ತು ಕರ್ತೃತ್ವ ಶಕ್ತಿಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳ ಸೃಜನಶೀಲ ಮನಸ್ಸಿನ ಕನ್ನಡಿಯೇ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗವು ಹೊರತರುತ್ತಿರುವ ‘ಯುವ ಮಂಥನ’ ಗೋಡೆ ಪತ್ರಿಕೆ ಎಂದು ಅಭಿಪ್ರಾಯ ಪಟ್ಟರು.
ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ. ಶೇಠ್ ಮಾತನಾಡಿ, ಯುವ ಮಂಥನ ಸಮಕಾಲೀನ ಸಾಂಸ್ಕೃತಿಕ ಸಂದರ್ಭದೊಡನೆ ಮಂಥನ ನಡೆಸಲು ಸಮರ್ಥ ಮಾಧ್ಯಮವಾಗಿದೆ. ನಮ್ಮ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಎಷ್ಟು ಸೃಜನಶೀಲರು ಎಂದು ಹೇಳಲು ಯುವ ಮಂಥನ ಗೋಡೆ ಪತ್ರಿಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೆಂಕಟರೆಡ್ಡಿ ರಾಮರೆಡ್ಡಿ, ಉಪನ್ಯಾಸಕರಾದ ಡಾ. ನಟರಾಜು ಜೆ. ಆರ್., ಡಾ. ಆಶಾರಾಣಿ ಕೆ., ಉಷಾ ಜಿ. ಎನ್., ಆಶಾ ಎಸ್. ಭಾಗವಹಿಸಿದ್ದರು.
ಸೃಜನಶೀಲತೆ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುತ್ತದೆ

Leave a comment
Leave a comment