ತುಮಕೂರು: ಸಿನಿಮಾದ ಮೂಲ ಸಾಮಾಗ್ರಿಯನ್ನು ಅರ್ಥ ಮಾಡಿಕೊಂಡರೆ ಸಿನಿಮಾ ವೀಕ್ಷಿಸುವ ದೃಷ್ಟಿಕೋನ ಬದಲಾಗಿ, ಕಥೆಯಿಂದ ವಿಚಾರ ಹೇಳುವ ಸಾಧನವಾಗಿ ಸಿನಿಮಾ ಸಮಾಜವನ್ನು ಆಳವಾಗಿ ಮುಟ್ಟಲಿದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಶುಕ್ರವಾರ ಹಮ್ಮಿಕೊಂಡಿದ್ದ ಐದು ದಿನಗಳ ‘ಸಿನಿ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಿನಿಮಾವನ್ನು ಮನೋರಂಜನೆಯಿoದ ಪ್ರಜ್ಞೆಯನ್ನು ತಿಳಿಗೊಳಿಸುವ ಸಾಧನವಾಗಿಸಬೇಕಾದರೆ ಸಿನಿಮಾ ಉನ್ನತ ಅಧ್ಯಯನ ಶಿಕ್ಷಣದ ಭಾಗವಾಗಬೇಕು. ನಮ್ಮ ಸುತ್ತಲು ನಡೆಯುವ ಕಥೆಯೇ ಸಿನಿಮಾವಾಗಿರುತ್ತದೆ. ಕಲ್ಪನಾ ಲೋಕದಲ್ಲಿ ತೇಲಿಸುವ ಸಿನಿಮಾಗಳು ಅರಿವನ್ನು ಮೂಡಿಸುವುದಿಲ್ಲ ಎಂದು ಹೇಳಿದರು.
ಸಮಾಜದ ಓರೆಕೋರೆಗಳನ್ನು ಚಿತ್ರಿಸುವ, ಪ್ರಭುತ್ವವನ್ನು ಪ್ರಶ್ನಿಸಿ, ಪಶ್ನಿಸುವಂತೆ ಪ್ರೇರೇಪಿಸುವ ಸಿನಿಮಾಗಳಿಗೆ ಸರ್ಕಾರ ಪ್ರಶಸ್ತಿ ಕೊಟ್ಟು ಸುಮ್ಮನಾಗಿಸುತ್ತದೆ. 1896ರಲ್ಲಿ ಹುಟ್ಟಿದ ಸಿನಿಮಾ ಪ್ರಸ್ತುತ ದಾಪುಗಾಲಿಟ್ಟು ಓಡುತ್ತಿದೆ. ಮನುಷ್ಯ ಜೀವನದಲ್ಲಿ ಆದ ಬದಲಾವಣೆಗಳನ್ನು, ತಲ್ಲಣಗಳನ್ನು ಒಳಗೊಳ್ಳುವುದೇ ಸಿನಿಮಾ ಎಂದು ಇಷ್ಟು ವರ್ಷವೂ ನಿರೂಪಿಸಿದೆ ಎಂದರು.
ಸಿನಿಮಾದಲ್ಲಿ ಕಥೆಗಿಂತಲೂ ಮುಖ್ಯವಾದದ್ದು ನಿರ್ದೇಶಕ ಯಾವ ರೀತಿ ಕಥೆ ಬಳಸಿಕೊಂಡು, ಸಮಾಜಕ್ಕೆ ಪ್ರಜ್ಞೆಯನ್ನು ಸೃಷ್ಟಿಸುತ್ತಾನೆಂಬುದು. ಸಿನಿಮಾದಲ್ಲಿ ದುಡಿಯಲೂಬಹುದು, ದುರ್ಬಳಕೆಯನ್ನೂ ಮಾಡಿಕೊಳ್ಳಬಹುದು. ಸಿನಿಮಾದ ಸಂರಚನೆ-ಸoವಿಧಾನ ಅರ್ಥಮಾಡಿಕೊಳ್ಳಬೇಕು ಎಂದರು.
120 ವರ್ಷಗಳ ಸಿನಿಮಾ ಇತಿಹಾಸದಲ್ಲಿ 30 ವರ್ಷಗಳಿಗೊಮ್ಮೆ ಆಗುತ್ತಿರುವ ಸಿನಿಮಾ ಚಳವಳಿಯನ್ನು ಗಮನಿಸಿದರೆ ಕಥೆಯನ್ನು ಗಟ್ಟಿಯಾಗಿ ಹೇಳುವುದರಿಂದ ಶುರುವಾಗಿ ಕಥೆ ಹೇಳದೆ ಪ್ರಶ್ನಿಸುವಂತೆ ಮಾಡುವುದು, ಇತರೆ ರಂಗಗಳ ಕಲೆಯನ್ನು ಇಲ್ಲಿ ತೋರಿಸುವುದಕ್ಕೆ 19ನೆಯ ಶತಮಾನದ ಕೊನೆಯಲ್ಲಿ ನಿಂತ ಚಳವಳಿ, ಪ್ರಸ್ತುತ ಕಾಲವನ್ನು ಹಿಡಿಯುವ ಸಾಧನವಾಗಿ ಬದಲಾಗಿದೆ ಎಂದು ತಿಳಿಸಿದರು.
ಶ್ರೇಷ್ಠ ಸಿನಿಮಾಗಳು ಬಂದಿದ್ದು ಯುರೋಪ್ ದೇಶದಿಂದ. ಉತ್ತಮ ಸಿನಿಮಾಗಳು ಬರುತ್ತಿರುವುದು ಏಷ್ಯಾ ಭಾಗದಿಂದ ಮತ್ತು ತೃತೀಯ ಜಗತ್ತಿನ ರಾಷ್ಟ್ರಗಳಿಂದ. ಸಿನಿಮಾವನ್ನು ‘ರಾಜಕೀಯ’ ದೃಷ್ಟಿಕೋನದಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.