ತುಮಕೂರು : ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ| ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ 889ನೇ ಬಸವೇಶ್ವರ ಜಯಂತಿಯನ್ನು ನಗರದ ಅಮಾನಿಕೆರೆಯ ಪಾರ್ಕ್ನಲ್ಲಿ ಆಚರಿಸಲಾಯಿತು.
ಬಸವ ಜಯಂತಿ ಪ್ರಯುಕ್ತ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ|| ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ರವರು ಮಾತನಾಡುತ್ತಾ 12ನೇ ಶತಮಾನದಲ್ಲಿ ವಚನ ಕ್ರಾಂತಿಯ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಿದ, ದಾರ್ಶನಿಕ, ಸಾಂಸ್ಕೃತಿಕ ನಾಯಕ ವೀರ ಶರಣ ಜಗಜ್ಯೋತಿ ಬಸವಣ್ಣನವರ ಚಿಂತನೆಗಳು, ತತ್ವ ಆದರ್ಶಗಳು, ಇಂದಿಗೂ ಪ್ರಸ್ತುತ. ಸಾಮಾಜಿಕ ಸುಧಾರಣೆಗೆ ಅವರು ನೀಡಿರುವ ಕೊಡುಗೆಗಳು ಅಪಾರ, ಶಿವಶರಣರ ಒಗ್ಗೂಡುವಿಕೆಗೆ ರಚಿಸಿದ ಅನುಭವ ಮಂಟಪವು, ದೇಶದ ಸಂಸತ್ ಭವನ ನಿರ್ಮಾಣಕ್ಕೂ ಪ್ರೇರಣೆಯಾಗಿದೆ. ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಪ್ರಶ್ನಿಸಿದ ಬಸವಣ್ಣನವರ ಅನೇಕ ವಚನಗಳು ಸಾಮಾಜಿಕ, ಧಾರ್ಮಿಕ ಕ್ರಾಂತಿಗೆ ಕಾರಣವಾಗಿದೆ.
ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಸ್ಥಾನ ಪಡೆದು ಸರ್ವ ಧರ್ಮದ ಸಮಾನತೆಯನ್ನು ಸಾರಿ, ಬಡ ಜನತೆಗೆ ವಚನ ಸಾಹಿತ್ಯವನ್ನು ಪರಿಚಯಿಸುವಲ್ಲಿ ಬಸವಣ್ಣನವರು ಮೊದಲಿಗರು. ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವಾರು ಅನಿಷ್ಠ ಪದ್ಧತಿಗಳನ್ನು ವಚನ ಸಾಹಿತ್ಯದ ಮೂಲಕ ಖಂಡಿಸಿ ಜನರಲ್ಲಿ ವೈಚಾರಿಕತೆ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದರು. ಅಂತರ್ಜಾತಿ ವಿವಾಹ, ಸರಳ ಜೀವನ, ಕಾಯತತ್ವವನ್ನು ಪ್ರತಿಪಾದಿಸಿ ಸಮ ಸಮಾಜ ನಿರ್ಮಿಸಲು ಅಡಿಪಾಯ ಹಾಕಿದವರು ಬಸವಣ್ಣನವರು. ಅವರ ಸಾಮಾಜಿಕ ತತ್ವ ಆದರ್ಶಗಳು ಸಮಾನತೆಯ ಚಿಂತನೆಗಳು ಇಂದಿಗೂ ಪ್ರಸ್ತುತ ಜೀವನದ ಪಾಠವೂ ಹೌದು ಎಂದರು.